ತುಮಕೂರಿನಲ್ಲಿ ಸಿನಿಮೀಯ ಶೈಲಿಯ ಪ್ರೇಮಕಥೆಯೊಂದು ದುರಂತ ಅಂತ್ಯ ಕಂಡಿದೆ. ಪ್ಯಾನ್ ಕಾರ್ಡ್ ಮಾಡಿಸುವ ಸಂದರ್ಭದಲ್ಲಿ ಪರಿಚಯವಾದ ಯುವಕ ಮತ್ತು ಯುವತಿ ನಡುವೆ ಪ್ರೀತಿ ಮೊಳೆತಿತ್ತು. ಇಬ್ಬರೂ ಬೇರೆ ಬೇರೆ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಪೋಷಕರು ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಮನೆಯವರ ವಿರೋಧವನ್ನು ಲೆಕ್ಕಿಸದೆ ಈ ಜೋಡಿ ಮದುವೆಯಾಗಿ ಹೊಸ ಜೀವನ ಆರಂಭಿಸಿತ್ತು.
ಮದುವೆಯಾದ ಆರಂಭದ ದಿನಗಳಲ್ಲಿ ಎಲ್ಲವೂ ಸುಸೂತ್ರವಾಗಿಯೇ ಇತ್ತು. ಆದರೆ, ಯುವತಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿದೆ. ಪತ್ನಿಯ ಜವಾಬ್ದಾರಿಯನ್ನು ಹೊರುವ ಬದಲು, ಆಕೆಯನ್ನು ಮನೆಯಿಂದ ಹೊರದಬ್ಬಿದ್ದಾನೆ. ಪೋಷಕರನ್ನು ಎದುರುಹಾಕಿಕೊಂಡು ಬಂದಿದ್ದ ಯುವತಿಗೆ ಈಗ ಇತ್ತ ಪತಿಯೂ ಇಲ್ಲದೆ, ಅತ್ತ ತವರು ಮನೆಯ ಆಸರೆಯೂ ಇಲ್ಲದೆ ಬೀದಿಗೆ ಬೀಳುವಂತಾಗಿದೆ.
ನ್ಯಾಯಕ್ಕಾಗಿ ಅಲೆಯುತ್ತಿರುವ ಈ ಗರ್ಭಿಣಿ ಮಹಿಳೆ ಈಗ ಪತಿಯ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಪ್ರೀತಿ ಮಾಡಿ ಕೈಕೊಟ್ಟ ಪತಿಗೆ ಶಿಕ್ಷೆಯಾಗಬೇಕು ಮತ್ತು ತನಗೆ ನ್ಯಾಯ ಸಿಗಬೇಕು ಎಂದು ಆಕೆ ಆಗ್ರಹಿಸುತ್ತಿದ್ದಾಳೆ. ಜಿಲ್ಲೆಯಲ್ಲಿ ಈ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ನಂಬಿ ಬಂದ ಹೆಣ್ಣುಮಗಳನ್ನು ಈ ರೀತಿ ಅರ್ಧ ದಾರಿಯಲ್ಲಿ ಕೈಬಿಟ್ಟ ಯುವಕನ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.









