ಮಧ್ಯರಂಗನಾಥನ ಸನ್ನಿಧಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾರ್ಮಿಕ ನುಡಿ

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದಲ್ಲಿ ಜೀರ್ಣೋದ್ಧಾರಗೊಂಡಿರುವ ಐತಿಹಾಸಿಕ ಶ್ರೀ ಜಗನ್ಮೋಹನ ಮಧ್ಯರಂಗನಾಥ ಸ್ವಾಮಿ ದೇವಾಲಯದ ಲೋಕಾರ್ಪಣೆ ಹಾಗೂ ಮಹಾ ಕುಂಬಾಭಿಷೇಕ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು (ಮೇ 21) ಭಾಗವಹಿಸಿದ್ದರು. ಕಾವೇರಿ ನದಿ ತೀರದಲ್ಲಿರುವ ಪುರಾಣ ಪ್ರಸಿದ್ಧ ಹಾಗೂ ಚೋಳರ ಕಾಲದ ಈ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪವಡಿಸಿರುವ ಮಧ್ಯರಂಗನಾಥನ ದರ್ಶನ ಪಡೆದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಮಧ್ಯರಂಗನ ದರ್ಶನದ ಬಳಿಕ ಮಾತನಾಡಿದ ಡಿಸಿಎಂ ಡಿಕೆಶಿ, “ದೇವಾಲಯ ಎನ್ನುವುದು ಭಕ್ತರು ಮತ್ತು ಭಗವಂತನ ನಡುವಿನ ವ್ಯವಹಾರದ ಸ್ಥಳ” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ರಾಜಕೀಯದಲ್ಲಿ ಏನೇ ಏರುಪೇರುಗಳಿದ್ದರೂ ಅಂತಿಮವಾಗಿ ದೇವರ ದರ್ಬಾರ್‌ನಲ್ಲಿ ನಂಬಿಕೆ ಇಡಬೇಕು ಎಂಬರ್ಥದಲ್ಲಿ ಅವರು ಆಡಿದ ಈ ಮಾತುಗಳು ಕುತೂಹಲ ಕೆರಳಿಸಿವೆ. ದೇವರ ಸನ್ನಿಧಿಯಲ್ಲಿ ನಿಂತು ತಾವು ಏನು ಕೇಳಿಕೊಂಡೆ ಎಂಬ ಗುಟ್ಟನ್ನು ಬಿಟ್ಟುಕೊಡದೆ, ಭಗವಂತನೊಂದಿಗೆ ಕೇವಲ ಭಕ್ತನ ಭಕ್ತಿ, ನಂಬಿಕೆ ಮತ್ತು ಕರ್ಮಗಳ ವ್ಯವಹಾರವಷ್ಟೇ ನಡೆಯುತ್ತದೆ ಎಂದು ತಮ್ಮದೇ ಶೈಲಿಯಲ್ಲಿ ವಿಶ್ಲೇಷಿಸಿದ್ದಾರೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ, ಕುರ್ಚಿ ಕಿತ್ತಾಟ ಹಾಗೂ ಮುಂದಿನ ರಾಜಕೀಯ ಲೆಕ್ಕಾಚಾರಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಡಿ.ಕೆ.ಶಿವಕುಮಾರ್ ಅವರ ಈ ಮಾತುಗಳು ಮಹತ್ವ ಪಡೆದುಕೊಂಡಿವೆ. ಈ ಹಿಂದೆಯೂ ಚಾಮುಂಡಿ ಬೆಟ್ಟ ಹಾಗೂ ಕಲಬುರಗಿಯಲ್ಲಿ “ಉಳಿ ಪೆಟ್ಟು ಬಿದ್ದರಷ್ಟೇ ಶಿಲೆ ಮೂರ್ತಿಯಾಗುತ್ತೆ” ಎಂಬಂತಹ ನಿಗೂಢ ಮಾತುಗಳನ್ನಾಡಿದ್ದ ಡಿಕೆಶಿ, ಇದೀಗ ಮಧ್ಯರಂಗನ ಸನ್ನಿಧಿಯಲ್ಲೂ ತಮ್ಮ ವಿರೋಧಿಗಳಿಗೆ ಹಾಗೂ ಆಪ್ತ ವಲಯಕ್ಕೆ ಪರೋಕ್ಷ ಸಂದೇಶ ರವಾನಿಸಿದಂತಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ವಿಶ್ಲೇಷಿಸಲಾಗುತ್ತಿದೆ.

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్