ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯ (PMUY) ಫಲಾನುಭವಿಗಳಿಗೆ ಸರ್ಕಾರವು ದೊಡ್ಡ ಆಘಾತ ನೀಡಿದೆ. ಬಿಪಿಎಲ್ ಮತ್ತು ಬಡ ಕುಟುಂಬಗಳಿಗೆ ಅನಿಲ ಸಂಪರ್ಕ ಒದಗಿಸುವ ಈ ಯೋಜನೆಯಡಿ, ಇದುವರೆಗೆ ವಾರ್ಷಿಕವಾಗಿ ನೀಡಲಾಗುತ್ತಿದ್ದ ರಿಯಾಯಿತಿ (ಸಬ್ಸಿಡಿ) ದರದ ಸಿಲಿಂಡರ್ಗಳ ಗರಿಷ್ಠ ಮಿತಿಯನ್ನು ದಿಢೀರನೆ 9 ರಿಂದ 4ಕ್ಕೆ ಕಡಿತಗೊಳಿಸಲಾಗಿದೆ. ಈ ಹೊಸ ನಿಯಮವು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ನಿರ್ವಹಣೆಯ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಸರ್ಕಾರದ ಬೊಕ್ಕಸದ ಮೇಲಿನ ಆರ್ಥಿಕ ಹೊರೆ ಹಾಗೂ ಸಬ್ಸಿಡಿ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಉಜ್ವಲ ಯೋಜನೆಯಡಿ ನೀಡಲಾಗುವ ಸಬ್ಸಿಡಿ ಹಣವನ್ನು ಆರ್ಥಿಕವಾಗಿ ಸರಿದೂಗಿಸಲು ಮತ್ತು ಯೋಜನೆಯಡಿ ವಿತರಣೆಯಾಗುವ ಸಿಲಿಂಡರ್ಗಳ ಬಳಕೆಯನ್ನು ನಿಯಂತ್ರಿಸಲು ಸರ್ಕಾರ ಈ ಕಡಿತದ ಮೊರೆ ಹೋಗಿದೆ ಎಂದು ಹೇಳಲಾಗಿದೆ. ಆದಾಗ್ಯೂ, ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರ್ ಅಂತ ಸಬ್ಸಿಡಿ ಸಿಲಿಂಡರ್ ಕೋಟಾವನ್ನು ಅರ್ಧಕ್ಕಿಂತ ಹೆಚ್ಚು ಕಡಿತಗೊಳಿಸಿರುವುದು ಗ್ರಾಮೀಣ ಭಾಗದ ಫಲಾನುಭವಿಗಳನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ.
ವಾರ್ಷಿಕವಾಗಿ ಕೇವಲ 4 ಸಿಲಿಂಡರ್ಗಳನ್ನು ಮಾತ್ರ ಸಬ್ಸಿಡಿ ದರದಲ್ಲಿ ಪಡೆಯುವುದರಿಂದ, ಉಳಿದ ತಿಂಗಳುಗಳಲ್ಲಿ ಮಾರುಕಟ್ಟೆಯ ದುಬಾರಿ ಬೆಲೆಗೆ ಸಿಲಿಂಡರ್ ಖರೀದಿಸುವುದು ಬಡ ಕುಟುಂಬಗಳಿಗೆ ಅಸಾಧ್ಯದ ಮಾತಾಗಿದೆ. ಇದರಿಂದಾಗಿ ಹಣಕಾಸಿನ ಅಭಾವದಿಂದ ಗ್ರಾಮೀಣ ಭಾಗದ ಮಹಿಳೆಯರು ಅನಿವಾರ್ಯವಾಗಿ ಮತ್ತೆ ಉರುವಲು ಮತ್ತು ಸೌದೆ ಒಲೆಗಳ ಮೊರೆ ಹೋಗುವ ಆತಂಕ ನಿರ್ಮಾಣವಾಗಿದೆ. ಸರ್ಕಾರದ ಈ ನಿರ್ಧಾರದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಕಡಿತಗೊಳಿಸಿರುವ ಸಬ್ಸಿಡಿ ಸಿಲಿಂಡರ್ಗಳ ಮಿತಿಯನ್ನು ಕೂಡಲೇ ಹಿಂಪಡೆದು ಮೊದಲಿನಂತೆಯೇ ವಿತರಿಸಬೇಕೆಂದು ಫಲಾನುಭವಿಗಳು ಒತ್ತಾಯಿಸುತ್ತಿದ್ದಾರೆ.









