ಸ್ಯಾಂಡಲ್ವುಡ್ ನಟ, ಹೋರಾಟಗಾರ ಚೇತನ್ ಅಹಿಂಸಾ ಅವರು ಸದಾ ಒಂದಲ್ಲಾ ಒಂದು ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ತಮಿಳುನಾಡಿನ ಖ್ಯಾತ ನಟ ದಳಪತಿ ವಿಜಯ್ ಅವರ ಹಾದಿಯಲ್ಲೇ ತಾವೂ ಸಹ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಲು ಸಿದ್ಧರಿರುವುದಾಗಿ ಘೋಷಿಸುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ. ಸಮಾಜದಲ್ಲಿ ಸಮಾನತೆ ತರಲು ಹಾಗೂ ಜನಪರ ಕೆಲಸಗಳನ್ನು ಮಾಡಲು ರಾಜಕೀಯ ವೇದಿಕೆ ಅಗತ್ಯವಿದೆ ಎಂಬುದು ಅವರ ನಿಲುವಾಗಿದೆ.
ಇತ್ತೀಚೆಗಷ್ಟೇ ನಟ ವಿಜಯ್ ಅವರು ‘ತಮಿழக ವೆಟ್ರಿ ಕಳಗಂ’ (ಟಿವಿಕೆ) ಎಂಬ ಹೊಸ ಪಕ್ಷವನ್ನು ಕಟ್ಟಿ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಪರ್ಯಾಯ ರಾಜಕೀಯ ಶಕ್ತಿಯೊಂದರ ಅಗತ್ಯವಿದೆ. ಪ್ರಸ್ತುತ ಇರುವ ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಂದ ನೈಜ ಬದಲಾವಣೆ ಸಾಧ್ಯವಿಲ್ಲ, ಹೀಗಾಗಿ ವಿಜಯ್ ಅವರ ರೀತಿಯಲ್ಲೇ ತಾವೂ ಕೂಡ ಜನರ ಧ್ವನಿಯಾಗಿ ರಾಜಕೀಯ ಅಖಾಡಕ್ಕೆ ಇಳಿಯುವುದಾಗಿ ಚೇತನ್ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಆದರೆ, ಚೇತನ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವ್ಯಂಗ್ಯ ಹಾಗೂ ವಿರೋಧ ವ್ಯಕ್ತವಾಗಿದೆ. ನೆಟ್ಟಿಗರು ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದು, “ದಯವಿಟ್ಟು ನೀವು ಸುಮ್ಮನಿರಿ, ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಸಮಸ್ಯೆಗಳಿವೆ, ನೀವು ಬಂದು ಇನ್ನೇನು ಉದ್ಧಾರ ಮಾಡುತ್ತೀರಿ?” ಎಂದು ಕಾಲೆಳೆದಿದ್ದಾರೆ. ಕೆಲವರಂತೂ ವಿಜಯ್ ಅವರ ಜನಪ್ರಿಯತೆ, ಪ್ರಭಾವಕ್ಕೂ ಹಾಗೂ ನಿಮಗೂ ಅಜಗಜಾಂತರ ವ್ಯತ್ಯಾಸವಿದೆ. ಹೀಗಾಗಿ ನಿಮ್ಮ ಹೋರಾಟವನ್ನು ಮಾತ್ರ ಮುಂದುವರಿಸಿ, ರಾಜಕೀಯದ ಕನಸು ಬಿಟ್ಟುಬಿಡಿ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.









