ಕೇರಳದ ವಯನಾಡಿನಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಐವರು ಮೃತಪಟ್ಟಿದ್ದಾರೆ. ಇಲ್ಲಿನ ನಿರ್ಮಾಣ ಹಂತದ ಸುರಂಗ ಮಾರ್ಗದ ಬಳಿ ಭಾರೀ ಭೂಕುಸಿತ ಉಂಟಾಗಿದೆ. ಸುರಂಗ ರಸ್ತೆ ಮಾರ್ಗದಲ್ಲಿ ಇಂತಹ ಅನಾಹುತಗಳು ಸಂಭವಿಸುವುದು ಸಾಮಾನ್ಯ ಸಂಗತಿಯೇ?. ಹಾಗಿದ್ದರೆ ಐತಿಹಾಸಿಕ ಬೆಂಗಳೂರಿನಲ್ಲಿ ಸರ್ಕಾರ ಅನುಮೋದಿತ ಸುರಂಗ ಮಾರ್ಗ ಯೋಜನೆ ಅಗತ್ಯವಿದೆಯೇ. ಈ ಯೋಜನೆಯಿಂದ ಭವಿಷ್ಯದಲ್ಲಿ ಆಪತ್ತು ಕಾದಿದೆಯಾ? ಎಂಬ ಪ್ರಶ್ನೆಗಳು ಉದ್ಭವಿಸಿವೆ.
ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾದ ಅಂದಿನ ಬೆಂಗಳೂರಿಗೂ ಇಂದಿನ ಬೆಂಗಳೂರಿಗೂ ಸಾಕಷ್ಟು ವ್ಯತ್ಯಾಸವಿದೆ. ನೂರಾರು ಕೆರೆಗಳ ಮೇಲೆ ಭವ್ಯ ಕಾಂಕ್ರೀಟ್ ನಗರ ನಿರ್ಮಾಣವಾಗಿದೆ. ಇಲ್ಲಿ ಐತಿಹಾಸಿಕ ದೇವಾಲಯ, ಸಸ್ಯ ಕಾಶಿ ಲಾಲ್ ಬಾಗ್, ನಮ್ಮ ಮೆಟ್ರೋ ಭೂಗತ-ಎತ್ತರಿಸಿದ ಮಾರ್ಗಗಳು, ಫ್ಲೈಓವರ್ ಗಳು ನಿರ್ಮಾಣಗೊಂಡಿವೆ. ದೊಡ್ಡ ದೊಡ್ಡ ಕಟ್ಟಡಗಳು ತಲೆಎತ್ತಿವೆ. ಇಂತಹ ನಗರದಲ್ಲಿ ಬಹುದೊಡ್ಡ ಸುರಂಗ ಮಾರ್ಗದ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಕೇರಳ ಭೂಕುಸಿತ ಬೆನ್ನಲ್ಲೆ ಬೆಂಗಳೂರಿನ ಮಹತ್ವದ ಟನಲ್ ರಸ್ತೆ ಯೋಜನೆ ಕುರಿತು ಸಾಕಷ್ಟು ಚರ್ಚೆಗಳು ಮುನ್ನೆಲೆ ಬರುತ್ತಿವೆ.
ಅವಳಿ ಸುರಂಗ ಯೋಜನೆ ಬಳಿ ಭೂಕುಸಿತ
ವಯನಾಡಿನ ಕಲ್ಲಾಡಿ ಎಂಬಲ್ಲಿ ನಡೆಯುತ್ತಿದ್ದ ಅವಳಿ ಸುರಂಗ ಯೋಜನೆ ಬಳಿ ಭೂಕುಸಿತ ಸಂಭವಿಸಿದೆ. ನಗರೀಕರಣ ಬೆನ್ನಲ್ಲೇ ಹೆಚ್ಚುತ್ತಿರುವ ಸಂಚಾರ ಸಮಸ್ಯೆಗಳಿಗೆ ಸುರಂಗ ರಸ್ತೆ ಮಾರ್ಗ ಉತ್ತಮ ಪರಿಹಾರ ಅಂತಲೂ ಹೇಳಲಾಗುತ್ತದೆ. ಆದರೆ ಇದರಿಂದಾಗುವ ಪರಿಸರ, ನೈಸರ್ಗಿಕ ಅಪಾಯಗಳಿಗೆ ಪರಿಹಾರವೇನು? ಎಂಬುದಕ್ಕೆ ನಮ್ಮ ಬಳಿ ಉತ್ತರವಿಲ್ಲ. ಬೆಂಗಳೂರು ಸುರಕ್ಷತೆಗೂ ಇಂಥ ಸುರಂಗ ಮಾರ್ಗದಿಂದ ಆಪತ್ತು ಇದೆಯಾ? ಎಂದು ಸಾರ್ವಜನಿಕರು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.
ಮೊದಲ ಹಂತದ ಯೋಜನೆ ಆರಂಭ
ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೆ ಒಟ್ಟು ಸುಮಾರು 17 ಕಿಲೋ ಮೀಟರ್ ಉದ್ದದ ಉದ್ದೇಶಿತ ಯೋಜನೆ ಪೈಕಿ ಸಿಎಂ ಡಿಕೆ ಶಿವಕುಮಾರ್ ಅವರು ಇತ್ತೀಚೆಗೆ ಹೆಬ್ಬಾಳ ಮತ್ತು ಮೇಖ್ರಿ ವೃತ್ತ ಬಳಿಕ ಮೊದಲ ಹಂತದಲ್ಲಿ ಅವಳಿ ಸುರಂಗ ಮಾರ್ಗಕ್ಕೆ ಇತ್ತೀಚೆಗೆ ಶಂಕುಸ್ಥಾಪನೆ ನೆರವೇರಿಸಿದರು. ಒಟ್ಟು ಸುಮಾರು 1199 ಕೋಟಿ ರೂಪಾಯಿ ವ್ಯಯಿಸಲಾಗುತ್ತದೆ. ಯೋಜನೆಯಿಂದ ಬೆಂಗಳೂರು ಸಂಚಾರ ದಟ್ಟಣೆಗೆ ಪರಿಹಾರವೆಂದು ಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರತಿಪಾದಿಸಿದ್ದಾರೆ.
ತಜ್ಞರ ಎಚ್ಚರಿಕೆ ನಿರ್ಲಕ್ಷಿಸಿ ಬೆಂಗಳೂರಲ್ಲಿ ಯೋಜನೆ ಜಾರಿ..
ವಾಸ್ತವದಲ್ಲಿ ಬೆಂಗಳೂರು ಸುರಂಗ ರಸ್ತೆ ಯೋಜನೆಗಾಗಿ ರಿಚಿಸಿದ್ದ ತಜ್ಞರ ಸಮಿತಿ ಸದಸ್ಯರೇ ಯೋಜನೆ ಕುರಿತು ಎಚ್ಚರಿಕೆ ನೀಡಿದ್ದರು. ಈ 'ಯೋಜನೆಯು ಅವಸರದಲ್ಲಿ ಸಿದ್ಧಗೊಂಡಿದೆ. ಡಿಪಿಆರ್ ದೋಷಪೂರಿತವಾಗಿದೆ. ಪರಿಸರ ಹಾಗೂ ನಗರದ ಜಲಮೂಲಗಳಿಗೆ ತೊಂದರೆ ಆಗುವ ಸಾಧ್ಯತೆ ಇದೆ ಎಂದು ತಜ್ಞರು ತಮ್ಮ ವರದಿಯಲ್ಲಿ ತಿಳಿಸಿದ್ದರು. ಲಾಲ್ ಬಾಗ್ ನಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಸುರಂಗ ಕೊರೆಯುವುದು ಸರಿಯಲ್ಲ ಎಂದಿದ್ದಾರೆ. ಅದರ ಬೆನ್ನಲ್ಲೆ ಪರಿಸರವಾದಿಗಳು, ವಿಪಕ್ಷ ನಾಯಕರು ಸೇರಿದಂತೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಿದ್ದರೂ ಸರ್ಕಾರ ಮೊದಲ ಹಂತದಲ್ಲಿ ಯೋಜನೆಗೆ ಕೈ ಹಾಕಿದ್ದು, ಕೆಲವು ಅನುಮಾನಗಳಿಗೆ ಕಾರಣವಾಗಿದೆ.
ಸರಂಗ ನಿರ್ಮಾಣ ವೇಳೆ ಭೂಕಂಪನ ಸಾಧ್ಯತೆ?
ಕೇರಳದಲ್ಲೂ ಸಹಿತ ಭೂಕುಸತ ಪ್ರದೇಶದಲ್ಲಿ 8.7 ಕೀ.ಮೀ ಸುರಂಗ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದೆ. ತಜ್ಞರ ವರದಿ ಮೇರೆಗೆ ಇಲ್ಲಿ ಯೋಜನೆಗೆ ಚಾಲನೆ ನೀಡಲಾಗಿದೆ. ಟನಲ್ ನಿರ್ಮಾಣ ವೇಳೆ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಲಾಗುತ್ತದೆ. ಅಲ್ಲಿನ ಕಲ್ಲುಗಳ ರಚನೆಯನ್ನು ಪುಡಿ ಮಾಡಬೇಕಾಗುತ್ತದೆ. ಕಲ್ಲುಗಳ ಪುಡಿ ಮಾಡಲು ಸ್ಪೋಟಿಸುವುದು ಅನಿವಾರ್ಯವಾಗಿರುತ್ತದೆ. ಆಗ ಭೂಕಂಪನಶೀಲತೆ ಹೆಚ್ಚಿರುತ್ತದೆ. ಮಳೆಯಾದಾಗ ಈ ಭಾಗದಲ್ಲಿ ಅನಿರೀಕ್ಷಿತ ನೀರುವ ನುಗ್ಗುವ ಸಾಧ್ಯತೆ ಇರುತ್ತದೆ. ಇಂತಹ ಕೆಲವು ಪರಿಸರೀಯ ಸವಾಲುಗಳು ಸಹ ಸುರಂಗ ನಿರ್ಮಾಣಕ್ಕೆ ಅಡ್ಡಿ ಪಡುವುದು ಕೆಲವೊಮ್ಮೆ ಹೀಗಿ ಮಣ್ಣು ಕುಸಿತಕ್ಕೆ ಕಾರಣವಾಗಲೂಹುದು.
ಚಾಲಕರ ಮೇಲಿನ ಒತ್ತಡವೇ BMTC ಅಪಘಾತಗಳಿಗೆ ಕಾರಣ, ರಜೆಗೂ ಲಂಚ ಕೊಡಬೇಕು; ಆರ್ ಅಶೋಕ್
ಯೋಜನೆಯನ್ನು ಪುನರ್ ಪರಿಶೀಲಿಸಬೇಕೆ?
ಕೇರಳಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ದುಪ್ಪಟ್ಟು ಉದ್ದದ ಸುರಂಗ ನಿರ್ಮಿಸಲಾಗುತ್ತದೆ. ದೊಡ್ಡ ದೊಡ್ಡ ಕಟ್ಟಡಗಳು, ಮೇಲ್ಸೇತುವೆ, ಮೆಟ್ರೋ ಕಾರಿಡಾರ್ ಗಳು ಇರುವ ಬೆಂಗಳೂರಿನಲ್ಲಿ ಟನಲ್ ನಿರ್ಮಾಣವು ಅಪಾಯ ತಂದೊಡುತ್ತಾ? ಟನಲ್ ಒಳಗೆ ನೀರು ಬಂದರೆ, ಭೂಕುಸಿತದಂತಹ ಅಪಾಯಗಳು ಎದುರಾದರೆ ಅದಕ್ಕೆ ಪರಿಹಾವೇನು?. ಅಂದುಕೊಂಡಂತೆ ಅನುಷ್ಠಾನಗೊಂಡಲ್ಲಿ ಅದು ಸಿರಿವಂತರಿಗೆ ಮಾತ್ರ, ಕಾರುಗಳಿಗೆ ಮಾತ್ರವೇ ಹೊರತು ಅಲ್ಲಿ ಜನಸಾಮಾನ್ಯ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ಅವಕಾಶ ಇಲ್ಲ. ಅಲ್ಲಿನ ಟೋಲ್ ಶುಲ್ಕ ಸಹಿತ ಹೆಚ್ಚು ದುಬಾರಿ ಆಗಿರಲಿದೆ ಎಂಬ ಮಾತುಗಳು ಈಗಾಗಲೇ ಕೇಳಿ ಬಂದಿವೆ. ಪ್ರಕೃತಿ ಮುನಿಸಿಕೊಂಡರೆ ನಿರೀಕ್ಷೆಗೂ ಮೀರಿದ ಅನಾಹುತಗಳು ಘಟಿಸಿರುವುದಕ್ಕೆ ಸಾಕ್ಷಿಗಳಿವೆ. ಹಾಗಾದರೆ ಬೆಂಗಳೂರಿಗೆ ಈ ಸುರಂಗ ಯೋಜನೆ ನಿರ್ಮಾಣದ ಅಗತ್ಯತೆ ಬಗ್ಗೆ ಮತ್ತೊಮ್ಮೆ ಅವಲೋಕನ ಮಾಡಬೇಕಾಗಿದೆ.









