ಕೇರಳದ ಕಣ್ಣೂರು ಕಡಲಿನಲ್ಲಿ ಈಜಲು ಹೋಗಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಯುವಕನೊಬ್ಬ ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. ನೆಲಮಂಗಲದ ಬ್ಯಾಡರಹಳ್ಳಿ ನಿವಾಸಿಯಾದ ಸಂತೋಷ್ (21) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಸಂತೋಷ್ ತನ್ನ ಇಬ್ಬರು ಸ್ನೇಹಿತರ ಜೊತೆಗೂಡಿ ಕೇರಳ ಪ್ರವಾಸಕ್ಕೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ.
ಮೃತ ಯುವಕ ಸಂತೋಷ್ ಹಾಗೂ ಆತನ ಸ್ನೇಹಿತರು ಮೊದಲು ಕೇರಳದ ಪ್ರಸಿದ್ಧ ಕೊಟ್ಟಿಯೂರ್ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಅಲ್ಲಿಂದ ಬಳಿಕ ಕಣ್ಣೂರು ಕಡಲ ತೀರದ ಸೌಂದರ್ಯವನ್ನು ವೀಕ್ಷಿಸಲು ತೆರಳಿದ್ದರು. ಈ ವೇಳೆ ಸಮುದ್ರದ ಅಲೆಗಳ ಆರ್ಭಟವನ್ನು ಲೆಕ್ಕಿಸದೆ ಯುವಕರು ನೀರಿಗೆ ಇಳಿದಿದ್ದಾರೆ. ಆದರೆ, ದುರದೃಷ್ಟವಶಾತ್ ಸಮುದ್ರದ ಭೀಕರ ರಾಕ್ಷಸ ಅಲೆಯೊಂದು ವೇಗವಾಗಿ ಅಪ್ಪಳಿಸಿದ ಪರಿಣಾಮ ಸಂತೋಷ್ ಸಮುದ್ರದ ನೀರಿನಲ್ಲಿ ಕೊಚ್ಚಿ ಹೋಗಿ ಮುಳುಗಿದ್ದಾನೆ.
ಅತ್ಯಂತ ಆಘಾತಕಾರಿ ವಿಷಯವೆಂದರೆ, ಯುವಕ ನೀರಿನ ಅಲೆಗಳ ನಡುವೆ ಸಿಲುಕಿ ಮುಳುಗುತ್ತಿರುವ ಲೈವ್ ದೃಶ್ಯಗಳು ಸ್ನೇಹಿತರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸಂತೋಷ್ ನೀರಿನಲ್ಲಿ ಮುಳುಗುತ್ತಿದ್ದಂತೆ ಆತಂಕಗೊಂಡ ಸ್ನೇಹಿತರು ಮತ್ತು ಸ್ಥಳೀಯರು ರಕ್ಷಿಸಲು ಪ್ರಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ಸಂತೋಷ್ ಮೃತದೇಹ ಪತ್ತೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.









