ರಾಜ್ಯದಲ್ಲಿ ಮುಂಗಾರಿನಲ್ಲೇ ಭಾರಿ ವಿದ್ಯುತ್ ಕ್ಷಾಮದ ಭೀತಿ ಎದುರಾಗಿದ್ದು, ವಾಡಿಕೆಯಂತೆ ಮಳೆಯಾಗದ ಕಾರಣ ಪ್ರಮುಖ ಜಲಾಶಯಗಳು ಬತ್ತಿ ಬರಿದಾಗುತ್ತಿವೆ. ಇದರ ನೇರ ಪರಿಣಾಮ ಜಲವಿದ್ಯುತ್ ಉತ್ಪಾದನೆಯ ಮೇಲೆ ಬಿದ್ದು, ಉತ್ಪಾದನಾ ಪ್ರಮಾಣ ಗಣನೀಯವಾಗಿ ಕುಸಿದಿದೆ. ಹವಾಮಾನ ವೈಪರೀತ್ಯ ಮತ್ತು ಮಳೆ ಕೊರತೆಯಿಂದ ರಾಜ್ಯವು ಕತ್ತಲೆಯಲ್ಲಿ ಮುಳುಗುವ ಆತಂಕ ಎದುರಿಸುತ್ತಿದೆ.
ಈ ಬಾರಿ ಎಲ್ ನಿನೋ ಪ್ರಭಾವದಿಂದ ರಾಜ್ಯದಲ್ಲಿ ಹವಾಮಾನ ವೈಪರೀತ್ಯ ಉಂಟಾಗಿ ಮುಂಗಾರು ಮಳೆ ಕೈಕೊಟ್ಟಿದೆ. ಜೂನ್ ತಿಂಗಳಲ್ಲಿ ಶೇ. 42ರಷ್ಟು ಹಾಗೂ ಜುಲೈನಲ್ಲಿ ಶೇ. 34ರಷ್ಟು ಮಳೆ ಕೊರತೆಯಾಗಿರುವುದರಿಂದ ಜಲಾಶಯಗಳಿಗೆ ನೀರಿನ ಹರಿವು ತೀವ್ರವಾಗಿ ಕಡಿಮೆಯಾಗಿದೆ.
ಮಳೆ ಕೊರತೆಯಿಂದ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಕೃಷಿ, ವಾಣಿಜ್ಯ ಮತ್ತು ಗೃಹೋಪಯೋಗಿ ಬಳಕೆಗಾಗಿ ದೈನಂದಿನ ವಿದ್ಯುತ್ ಬೇಡಿಕೆ 13,000 ಮೆಗಾವ್ಯಾಟ್ ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಪರ್ಯಾಯ ವಿದ್ಯುತ್ ಮೂಲಗಳನ್ನು ಬಳಸುವ ಕುರಿತು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.








