ದೇಶದ ಕಡಲ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತೀಯ ಕೋಸ್ಟ್ ಗಾರ್ಡ್ನ (Indian Coast Guard) ಸಾವಿತ್ರಿಬಾಯಿ ಫುಲೆ ನೌಕೆಯು ತನ್ನ 20 ವರ್ಷದ ಸುದೀರ್ಘ ಸೇವೆಯಿಂದ ಕಾರವಾರದ (Karwar) ಬೈತಕೋಲ್ ಬಂದರಿನಲ್ಲಿ ನಿವೃತ್ತಿಯಾಗಿದೆ.
ದೇಶದ ಪಶ್ಚಿಮ ಕರಾವಳಿ ಹಾಗೂ ವಿಶಾಲ ಅರಬ್ಬಿ ಸಮುದ್ರದಲ್ಲಿ (Arabian Sea) ವಿವಿಧ ರೋಚಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಗಡಿ ರಕ್ಷಿಸುವ ಜೊತೆಗೆ ಮೀನುಗಾರರ ಹಿತ ಕಾಪಾಡುತಿದ್ದ ಸಾವಿತ್ರಿಬಾಯಿ ಫುಲೆ ನೌಕೆ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿತು. ನೌಕೆಯ ಕಮಾಂಡೆಂಟ್ ಗೌರವ್ ಶ್ರೀವಾಸ್ತವ್ ಧ್ವಜ ಇಳಿಸಿ ಅಂತಿಮ ವಿದಾಯ ಹೇಳುವ ಮೂಲಕ ಸಾವಿತ್ರಿಬಾಯಿ ಫುಲ್ ನೌಕೆಯ ಲಾಂಚನವನ್ನ ಕಾರವಾರ ವಿಭಾಗದ ಡೆಪ್ಯುಟಿ ಇನ್ಸಪೆಕ್ಟರ್ ಜನರಲ್ ಅವರಿಗೆ ಹಸ್ತಾಂತರಿಸಿ, ನಿವೃತ್ತಿಯ ವಿಧಿ ಪೂರೈಸಿದರು.
ದೇಶದಲ್ಲಿ ಮಹಿಳಾ ಶಿಕ್ಷಣದ ಕ್ರಾಂತಿ ತಂದಿದ್ದ ಮಹಾರಾಷ್ಟ್ರದ ಸಾವಿತ್ರಿಬಾಯಿ ಪುಲೆಯವರ ಸೇವೆಯ ನೆನಪಿಗಾಗಿ 2005 ರಲ್ಲಿ ಗೋವಾ ಶಿಪ್ಯಾರ್ಡನಲ್ಲಿ ನಿರ್ಮಾಣ ಮಾಡಲಾದ ಹಡಗು 2006ರ ಅಕ್ಟೋಬರ್ 28ರಂದು ಗೋವಾದಲ್ಲಿ ದೇಶ ಸೇವೆಗೆ ಸಮರ್ಪಿತವಾಗಿತ್ತು. ನಂತರ ಹಡಗು ಮಂಗಳೂರಿಗೆ ಆಗಮಿಸಿತ್ತು. 2021ರ ಏಪ್ರಿಲ್ನಿಂದ ಈ ಹಡಗು ಕಾರವಾರದಲ್ಲಿ ನೆಲೆಸಿತ್ತು.
`ವಿ ಪ್ರೊಟೆಕ್ಟ್’ (ನಾವು ರಕ್ಷಿಸುತ್ತೇವೆ) ಎಂಬುದು ಹಡಗಿನ ಧ್ಯೇಯ ವಾಕ್ಯವಾಗಿದ್ದು, 35 ನಾವಿಕರು, ಐದು ಜನ ಅಧಿಕಾರಿಗಳು ಸೇರಿ ಒಟ್ಟು 40 ಸಿಬ್ಬಂದಿ ಹೊಂದಿದ್ದ ಈ ಹಡಗು ಅತ್ಯಾಧುನಿಕ ಉಪಕರಣ, ಶಸ್ತ್ರಾಸ್ತ ಹೊತ್ತು ಕಡಲಿನಲ್ಲಿ 20 ವರ್ಷಗಳಲ್ಲಿ ಮಾದಕ ದ್ರವ್ಯ ಸಾಗಣೆದಾರರು, ವಿವಿಧ ರೀತಿಯ ಅಕ್ರಮ ಚಟುವಟಿಕೆಗಳನ್ನು ನಡೆಸುವವರನ್ನು ಹಿಡಿಯುವ ಹಲವು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದೆ. ಇದಷ್ಟೇ ಮಾತ್ರವಲ್ಲ. ಅರಬ್ಬಿ ಸಮುದ್ರ ಭಾಗದ ಮೀನುಗಾರಿಕಾ ದೋಣಿಗಳಿಗೆ ಬೆಂಕಿ ಹತ್ತಿರುವುದು, ಮೀನುಗಾರಿಕೆ ದೋಣಿಗಳ ಮುಳುಗಡೆ ಮುಂತಾದ ಪ್ರಸಂಗಗಳಲ್ಲಿ ಹುಡುಕಾಟ ಹಾಗೂ ರಕ್ಷಣೆಗೆ ಧಾವಿಸಿ ಕಾರ್ಯಾಚರಣೆ ನಡೆಸಿದೆ.
ಅತೀ ವೇಗದ ಕಾರ್ಯಾಚರಣೆ ನಡೆಸುವ ಷಿಪ್ ಇದಾಗಿದ್ದು, ತನ್ನ ವೃತ್ತಿ ಬದುಕಿನಲ್ಲಿ 2006-07ರಲ್ಲಿ ಬೆಸ್ಟ್ ಸರ್ಚ ಎಂಡ್ ರೆಸ್ಕ್ಯೂ ಯುನಿಟ್ ಇನ್ ಸರ್ವಿಸ್, ಬೆಸ್ಟ್ ಸರ್ಚಿಂಗ್ ಟ್ರೋಫಿಗಳ ಗೌರವ ಸಿಕ್ಕಿತ್ತು. ದೇಶದ ಅತೀ ವೇಗದ ಸರ್ಚಿಂಗ್ ಶಿಪ್ಗಳಲ್ಲಿ ಇದು ಸಹ ಸ್ಥಾನ ಪಡೆದಿತ್ತು.
2720 ಕೆವಿ ಡೀಸೆಲ್ ಇಂಜಿನ್ ಹೊಂದಿರುವ ಈ ಹಡಗು ಗಂಟೆಗೆ 35 ನಾಟಿಕಲ್ ಮೈಲ್ ಕ್ರಮಿಸಬಲ್ಲ ಹಡಗು. ಇದುವರೆಗೆ ಅರಬ್ಬಿ ಸಮುದ್ರದಲ್ಲಿ 122 ತಾಸುಗಳ 1464 ನಾಟಿಕಲ್ ಮೈಲ್ ಕ್ರಮಿಸಿದೆ. ಸಾವಿತ್ರಿಬಾಯಿ ಪುಲೆ ಸರೋಜಿನಿ ನಾಯ್ಡು ವರ್ಗಕ್ಕೆ ಸೇರಿದ ಶೀಘ್ರವಾಗಿ ಚಲಿಸುವ ಗಸ್ತು ನೌಕೆ (ಎಫ್ಪಿವಿ) ಯಾಗಿದೆ. 50.44 ಮೀಟರ್ ಉದ್ದ, 7.51 ಮೀಟರ್ ಅಗಲವಿದೆ. 270 ಟನ್ ಭಾರವಿದೆ. ಇದೇ ಮಾದರಿಯ ನೌಕೆ ಮೀರಾ ಬೆನ್ ಗುಜರಾತ್ನ ಓಕಾದಲ್ಲಿ ಕಳೆದ ತಿಂಗಳು ನಿವೃತ್ತಿಯಾಗಿತ್ತು. ಜೂನ್ನಲ್ಲಿ ತಟ ಗಸ್ತು ನೌಕೆ ಐಸಿಜಿಎಸ್ ಸಾರಂಗ್ ತಮಿಳುನಾಡಿನಲ್ಲಿ ನಿವೃತ್ತಿ ಹೊಂದಿದೆ. ಇದೀಗ ಕಾರವಾರದಲ್ಲಿ ಈ ನೌಕೆ ನಿವೃತ್ತಿ ಹೊಂದಿದ್ದು, ಅತೀ ಶೀಘ್ರದಲ್ಲಿ ಈ ಶಿಪ್ನ ಹರಾಜು ಪ್ರಕ್ರಿಯೆ ನಡೆಸಿ, ಇವುಗಳ ವಸ್ತುಗಳನ್ನ ಬೇರ್ಪಡಿಸಲಾಗುತ್ತದೆ.
ಮೇಕ್ ಇನ್ ಇಂಡಿಯಾ ಎನ್ನುವ ಧ್ಯೇಯ ವಾಕ್ಯದಲ್ಲಿ ಸ್ವದೇಶಿ ನಿರ್ಮಿತ ಹಡಗುಗಳಿಗೆ ನೌಕಾದಳ ಹೆಚ್ಚಿನ ಒತ್ತು ನೀಡುತ್ತಿದೆ. ಹೆಚ್ಚಿನ ವೆಚ್ಚ, ಇಂಧನ ಬಳಕೆಯಾಗುತ್ತಿದ್ದ ದುಬಾರಿ ವೆಚ್ಚದ ಸಾವಿತ್ರಿಬಾಯಿ ಪುಲೆ ಹಡಗು ಸೇವಾ ನಿವೃತ್ತಿ ನಂತರ ಕಾರವಾರದಲ್ಲಿ ಸ್ವಲ್ಪ ದಿನ ಬಂದರಿನಲ್ಲೇ ಲಂಗರು ಹಾಕಲಿದ್ದು, ಇದರ ಸ್ಥಾನಕ್ಕೆ ಮುಂಬೈನಿಂದ ಪರಾಗ್ ಷಿಪ್ ಅನ್ನು ಅರಬ್ಬಿ ಸಮುದ್ರದ ಗಸ್ತಿಗೆ ಇಳಿಸಲಾಗುತ್ತದೆ.ಇ








