ನೀವ್ಯಾರು ಹೊಸದಾಗಿ ಒತ್ತುವರಿ ಮಾಡ್ಬೇಡಿ, ಇರೋ ಜಮೀನನ್ನು ಭದ್ರವಾಗಿ ಇಟ್ಟುಕೊಳ್ಳಿ ಎಂದು ಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅವರು ಮಲೆನಾಡಿನ ರೈತರಿಗೆ (Farmers) ಹೇಳಿದ್ದಾರೆ.
ಬಾಳೆಹೊನ್ನೂರಿನಲ್ಲಿ (Balehonnuru) ಕಸ್ತೂರಿರಂಗನ್ ವರದಿ ಬಗ್ಗೆ ರೈತರು, ಸಾರ್ವಜನಿಕರ ಜೊತೆ ಸಂವಾದ ನಡೆಸಿ ಅವರು ಮಾತನಾಡಿದರು. ಈ ವೇಳೆ, ಹೊಸದಾಗಿ ಒತ್ತುವರಿ ಮಾಡಿದರೆ ಅವಕಾಶವಿಲ್ಲ. ಈಗ ನಿಮಗೆ ಇರುವ ನಿಮ್ಮ ಜಮೀನನ್ನು ಭದ್ರವಾಗಿ ಇಟ್ಟುಕೊಳ್ಳಿ. ಯಾರಿಗೂ ತೊಂದರೆ, ನೋಟಿಸ್ ಕೊಡಬೇಡಿ ಎಂದು ಅರಣ್ಯ ಇಲಾಖೆಗೆ ಹೇಳಿದ್ದೇನೆ ಎಂದರು.
ಲೀಜ್ ವಿಚಾರದಲ್ಲಿ ಎಲ್ಲರಿಗೂ 25 ವರ್ಷ ಮಾಡಬೇಕು ಅಂತ ತೀರ್ಮಾನಿಸಿ ಕೇಂದ್ರಕ್ಕೆ ಕಳಿಸಲು ಚಿಂತಿಸಿದ್ದೇವೆ. ಎಕೋ ಸೆನ್ಸಿಟೀವ್ ಜೋನ್ ಕೈಬಿಡುವಂತೆ ರೈತರು ಸೂಚಿಸಿದ್ದಾರೆ. ಕೇಂದ್ರಕ್ಕೆ ಯಾವ ರೀತಿ ವರದಿ ಕೊಡಬಹುದು ಎಂದು ಅಧಿಕಾರಿಗಳ ಜೊತೆ ಚರ್ಚಿಸಿ ಕೊಡುತ್ತೇವೆ ಎಂದು ಮಾಹಿತಿ ನೀಡಿದರು.
ಮಳೆಗಾಗಿ ನಾನು ಎಲ್ಲಾ ಕಡೆ ಪ್ರಾರ್ಥನೆ ಮಾಡಿದ್ದೇನೆ. ಋಷ್ಯಶೃಂಗೇಶ್ವರ ದೇವಾಲಯಕ್ಕೆ ನಾನು ಬರಬೇಕು. ಸರ್ಕಾರದ ಪರವಾಗಿ ರಾಜೇಗೌಡರಿಗೆ ಪೂಜೆ ಮಾಡಿಸಲು ಹೇಳಿದ್ದೆ, ಮಾಡಿಸಿದ್ದಾರೆ. ನಿಮ್ಮ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲು ಇಲ್ಲಿಗೆ ಬಂದಿದ್ದೇನೆ. ಮುಂದೆ ಶಿವಮೊಗ್ಗ, ಚಿಕ್ಕಮಗಳೂರಿನಲ್ಲೂ ಸಚಿವ ಸಂಪುಟ ಸಭೆ ಮಾಡುತ್ತೇನೆ ಎಂದರು.
ನನಗೂ ಈ ಜಾಗಕ್ಕೂ ಬಹಳ ಭಾವಾನಾತ್ಮಕ ಸಂಬಂಧವಿದೆ. ಮಂಗಳೂರಿನಲ್ಲಿ ಕರಾವಳಿ ಬಗ್ಗೆ ಮಾತ್ರ ಚಿಂತೆ ಮಾಡಿಲ್ಲ. ಮಲೆನಾಡು-ಕರಾವಳಿಗೆ ವಿಶೇಷ ಪ್ಯಾಕೇಜ್ ಮಾಡಿದ್ದೇವೆ. 320 ಕಿ.ಮೀ. ವಿಶೇಷ ಪಾಲಿಸಿ ತಂದಿದ್ದೇನೆ. ವಲಸೆ ಹೋಗುವುದು ತಪ್ಪಬೇಕು, ಇಲ್ಲಿಯೇ ಕೆಲಸ ಸಿಗಬೇಕು, ಅದಕ್ಕೆ ಹೊಸ ರೂಪುರೇಷೆ ಮಾಡಿದ್ದೇವೆ. ಈ ಸಭೆ ಮಾಡಬೇಕಾದರೆ, ನಿಮ್ಮ ಶಾಸಕರು, ಜಿಲ್ಲಾ ಮಂತ್ರಿಗಳು, ಎಲ್ಲರ ಸಮಸ್ಯೆ ಕೇಳಿದ್ದೇನೆ. ಅಧಿವೇಶನದಲ್ಲಿ ಕಿರುಚಿ ಕಾಲ ಕಳೆಯುತ್ತಿದ್ದರು. ಅದಕ್ಕೆ ನಾನೇ ಪ್ರತ್ಯೇಕವಾಗಿ ಕರೆಸಿ ಮಾತನಾಡಿದೆ. 27ರ ಒಳಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದರು.
ನಿಮ್ಮ ಬದುಕನ್ನ ಬದಲಿಸಬೇಕು, ಬದಲಾವಣೆ ತರಬೇಕು ಅನ್ನೋದು ನನ್ನ ಸಂಕಲ್ಪ. ಭಾವನೆ ಮೇಲೆ ರಾಜಕಾರಣ ಮಾಡುತ್ತಿಲ್ಲ, ಬದುಕಿನ ರಾಜಕಾರಣ ಮಾಡುತ್ತಿದ್ದೇನೆ. ನಾನು ಹೃದಯ ಶ್ರೀಮಂತಿಕೆ ಇಟ್ಟುಕೊಂಡಿರೋ ವ್ಯಕ್ತಿ, ಜನರ ಭಾವನೆ ತಿಳಿದು ಅಸೆಂಬ್ಲಿಯಲ್ಲಿ ಉತ್ತರಿಸಲು ಬಂದಿದ್ದೇನೆ.
ರಾಜ್ಯದಲ್ಲಿ ಮಳೆ ಇಲ್ಲ, ಬರವಿದೆ. ಈ ಬಗ್ಗೆ ಪ್ರಧಾನಿ ಕೂಡ ನಮಗೆ ಸೂಚನೆ ನೀಡಿದ್ದರು. ರೈತರ ಸಮಸ್ಯೆ, ಬರದ ಬಗ್ಗೆ 3 ದಿನ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ. ನೀವು ನನ್ನ ಭೇಟಿ ಮಾಡಲು ಕಷ್ಟ ಆಗಬಹುದು. ಅದೇ ಕಾರಣಕ್ಕೆ ಪ್ರಜಾಸೇವೆ ಇಲಾಖೆ ತಂದಿದ್ದೇನೆ ಎಂದು ಮಾಹಿತಿ ನೀಡಿದರು.








