ರಾಜ್ಯದಲ್ಲಿ ಸಾಲು ಸಾಲು ಹಬ್ಬಗಳ ಸೀಸನ್ ಆರಂಭವಾಗುತ್ತಿರುವ ಬೆನ್ನಲ್ಲೇ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಕರ್ನಾಟಕದಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ ಬರೋಬ್ಬರಿ 8 ರೂಪಾಯಿಗಳಷ್ಟು ಹೆಚ್ಚಳ ಮಾಡಬೇಕು ಎಂದು ಹಾಲು ಉತ್ಪಾದಕರ ಒಕ್ಕೂಟಗಳು ರಾಜ್ಯ ಸರ್ಕಾರವನ್ನ ಒತ್ತಾಯಿಸಿವೆ.
ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಹಾಲು ಉತ್ಪಾದಕರ ಸಂಘಗಳ ಪ್ರಮುಖರು ಈ ಬೇಡಿಕೆಯನ್ನ ಸರ್ಕಾರದ ಮುಂದಿಟ್ಟಿದ್ದಾರೆ. ದಿನೇ ದಿನೇ ಹೆಚ್ಚಾಗುತ್ತಿರುವ ಉತ್ಪಾದನಾ ವೆಚ್ಚ ಹಾಗೂ ಕುಸಿಯುತ್ತಿರುವ ಹಾಲಿನ ಇಳುವರಿಯಿಂದಾಗಿ ಹೈನುಗಾರರು ಆರ್ಥಿಕವಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ರಾಜ್ಯದ ಪ್ರಮುಖ ಒಕ್ಕೂಟಗಳಾದ ಬೆಂಗಳೂರು ಹಾಲು ಒಕ್ಕೂಟ (Bamul), ಚಾಮರಾಜನಗರ ಹಾಲು ಒಕ್ಕೂಟ (Chamul), ಮಂಡ್ಯ ಮತ್ತು ತುಮಕೂರು ಸೇರಿದಂತೆ ಒಟ್ಟು 16 ಹಾಲು ಒಕ್ಕೂಟಗಳು ಈ ದರ ಏರಿಕೆ ಪ್ರಸ್ತಾವನೆಗೆ ಬೆಂಬಲ ಸೂಚಿಸಿವೆ. ಕೇವಲ ಹಾಲಿನ ದರ ಮಾತ್ರವಲ್ಲದೆ, ಹಾಲು ಉತ್ಪಾದಕರಿಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹಧನವನ್ನ ಸಹ ತಕ್ಷಣವೇ ಹೆಚ್ಚಿಸಬೇಕು ಎಂದು ಆಗ್ರಹಿಸಲಾಗಿದೆ.
ಹಾಲು ಒಕ್ಕೂಟಗಳ ಮುಖಂಡರು ನೀಡಿದ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಎದುರಾಗಿರುವ ಬರಗಾಲ ಮತ್ತು ಮಳೆಯ ಕೊರತೆಯಿಂದಾಗಿ ಜಾನುವಾರುಗಳಿಗೆ ಹಸಿರು ಮೇವಿನ ತೀವ್ರ ಕೊರತೆ ಉಂಟಾಗಿದೆ. ಇದರ ಜೊತೆಗೆ ಪಶು ಆಹಾರ ತಯಾರಿಸಲು ಬಳಸುವ ಪ್ರಮುಖ ಕಚ್ಚಾ ವಸ್ತುಗಳಾದ ಮೆಕ್ಕೆಜೋಳ, ಬೂಸಾ ಹಾಗೂ ಕಾಕಂಬಿ ಬೆಲೆಯು ಮಾರುಕಟ್ಟೆಯಲ್ಲಿ ಶೇಕಡಾ 25ರಷ್ಟು ದುಬಾರಿಯಾಗಿದೆ.
ಇಂಧನ ಮತ್ತು ಸಾರಿಗೆ ವೆಚ್ಚವೂ ಗಣನೀಯವಾಗಿ ಹೆಚ್ಚಿರುವುದು ರೈತರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಪ್ರಸ್ತುತ ಹೈನುಗಾರರು ಹಾಲಿನ ಉತ್ಪಾದನೆಗೆ ಹೆಚ್ಚಿನ ಹಣ ವ್ಯಯಿಸುತ್ತಿದ್ದಾರೆ. ಆದರೆ, ಅವರು ಉತ್ಪಾದಿಸುವ ಹಾಲಿಗೆ ಸಿಗುತ್ತಿರುವ ಬೆಲೆ ಮಾತ್ರ ಏರಿಕೆಯಾಗಿಲ್ಲ. ಇದರಿಂದ ಹೈನುಗಾರಿಕೆಯನ್ನೇ ನಂಬಿಕೊಂಡಿರುವ ಕುಟುಂಬಗಳ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಒಕ್ಕೂಟಗಳು ಸ್ಪಷ್ಟಪಡಿಸಿವೆ.
ಕರ್ನಾಟಕದಲ್ಲಿ ಇತ್ತೀಚೆಗೆ ಪ್ರತಿದಿನದ ಹಾಲಿನ ಉತ್ಪಾದನೆ ಗಣನೀಯವಾಗಿ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೆಎಂಎಫ್ ಅಂಕಿಅಂಶಗಳ ಪ್ರಕಾರ, ಈ ಹಿಂದೆ ಪ್ರತಿದಿನ ಸರಿಸುಮಾರು 1.11 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಆದರೆ, ಪ್ರಸ್ತುತ ಈ ಪ್ರಮಾಣವು 1.05 ಕೋಟಿಯಿಂದ 1.06 ಕೋಟಿ ಲೀಟರ್ಗೆ ಇಳಿಕೆಯಾಗಿದೆ.
ಹಾಲಿನ ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ರೈತರಿಗೆ ಪಾವತಿಸುವ ಮೊತ್ತವನ್ನ ಹೆಚ್ಚಿಸದಿದ್ದರೆ, ಹೈನುಗಾರರು ಈ ವೃತ್ತಿಯಿಂದ ವಿಮುಖರಾಗುವ ಅಪಾಯವಿದೆ. ಇದು ಭವಿಷ್ಯದಲ್ಲಿ ಹಾಲಿನ ಅಭಾವಕ್ಕೂ ಕಾರಣವಾಗಬಹುದು ಎಂದು ಒಕ್ಕೂಟಗಳ ಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಬಮುಲ್ ಅಧ್ಯಕ್ಷರಾದ ನಾಗರಾಜ್ ಅವರು ಮಾತನಾಡಿ, ಹಾಲಿನ ದರ ಏರಿಕೆ ಮಾಡುವಂತೆ ಕೋರಿ ಕಳೆದ ಎಂಟು ತಿಂಗಳಿನಿಂದ ರಾಜ್ಯ ಸರ್ಕಾರದೊಂದಿಗೆ ನಿರಂತರವಾಗಿ ಮಾತುಕತೆ ನಡೆಸಲಾಗುತ್ತಿದೆ. ಆದರೆ ಈವರೆಗೂ ಯಾವುದೇ ಸಕಾರಾತ್ಮಕ ನಿರ್ಧಾರ ಹೊರಬಿದ್ದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೀಗಾಗಿ ಇದೀಗ ಹಾಲು ಒಕ್ಕೂಟಗಳು ಸರ್ಕಾರಕ್ಕೆ ಕೇವಲ ಮೂರು ದಿನಗಳ ಗಡುವು ನೀಡಿವೆ.
ಈ ಮೂರು ದಿನಗಳ ಒಳಗಾಗಿ ರಾಜ್ಯ ಸರ್ಕಾರವು ಸಚಿವ ಸಂಪುಟ ಸಭೆ ಕರೆದು, ಹಾಲಿನ ದರವನ್ನು ಲೀಟರ್ಗೆ 8 ರೂ. ಹೆಚ್ಚಳ ಮಾಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕು. ಒಂದು ವೇಳೆ ಸರ್ಕಾರ ರೈತರ ಈ ಬೇಡಿಕೆಯನ್ನ ನಿರ್ಲಕ್ಷಿಸಿದರೆ, ರಾಜ್ಯಾದ್ಯಂತ ಇರುವ ಎಲ್ಲಾ ಹಾಲು ಉತ್ಪಾದಕರು ಮತ್ತು ರೈತರು ಒಗ್ಗೂಡಿ ವಿಧಾನಸೌಧದತ್ತ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಲಾಗಿದೆ. ಒಟ್ಟಿನಲ್ಲಿ ಮುಂಬರುವ ಹಬ್ಬಗಳ ಸೀಸನ್ನಲ್ಲಿ ನಂದಿನಿ ಹಾಲಿನ ದರ ಏರಿಕೆಯಾಗುವುದು ಬಹುತೇಕ ಖಚಿತವಾಗಿದ್ದು, ಇದು ಸಾಮಾನ್ಯ ಜನರ ದೈನಂದಿನ ಬಜೆಟ್ ಮೇಲೆ ನೇರ ಪರಿಣಾಮ ಬೀರಲಿದೆ.








